
ನಮಸ್ಕಾರ, ಎಲ್ಲರಿಗೂ! ಪ್ರತಿವರ್ಷ ನವೆಂಬರ್ನಿಂದ ಜನವರಿವರೆಗೆ ಲಕ್ಷಾಂತರ ಭಕ್ತರು ಒಂದು ಕಠಿಣ ವ್ರತ ಕೈಗೊಂಡು, ‘ಸ್ವಾಮಿ ಶರಣಂ ಅಯ್ಯಪ್ಪ’ ಎಂದು ಕೂಗುತ್ತಾ ಶಬರಿಮಲೆಗೆ ಯಾತ್ರೆ ಮಾಡುತ್ತಾರೆ. ಆದರೆ, ಅಯ್ಯಪ್ಪ ಸ್ವಾಮಿಯ ಈ ಭಕ್ತರು ಮುಖ್ಯವಾಗಿ ಕಪ್ಪು ಅಥವಾ ಗಾಢ ನೀಲಿ ಬಟ್ಟೆಗಳನ್ನು ಯಾಕೆ ಧರಿಸುತ್ತಾರೆ? ಇದರ ಹಿಂದಿರುವ ಆಳವಾದ ಕಥೆ ಏನು? ಬನ್ನಿ, ಇಂದಿನ ವಿಡಿಯೋದಲ್ಲಿ ತಿಳಿಯೋಣ.
ಶಬರಿಮಲೆ ಯಾತ್ರೆಯು 48 ದಿನಗಳ ‘ಮಂಡಲ ವ್ರತ’ದ ಕಠಿಣ ನಿಯಮಗಳ ಮೇಲೆ ನಿಂತಿದೆ. ಈ ವ್ರತದಲ್ಲಿ ಬ್ರಹ್ಮಚರ್ಯ, ಸಾತ್ವಿಕ ಆಹಾರ, ಮತ್ತು ಚಪ್ಪಲಿ ಬಿಡುವುದು ಮುಖ್ಯ. ಈ ಎಲ್ಲಾ ವ್ರತಗಳ ಜೊತೆಗೆ ಕಡ್ಡಾಯವಾಗಿ ಪಾಲಿಸಬೇಕಾದ ಇನ್ನೊಂದು ನಿಯಮವೇ ಕಪ್ಪು ವಸ್ತ್ರ ಧಾರಣೆ! ಮೊದಲಿಗೆ ಇದರ ಕಾರಣ ತಿಳಿಯೋಣ. ಇದರ ಹಿಂದಿರುವ ಮುಖ್ಯ ಕಾರಣವೇ ಶನೀಶ್ವರ ದೇವರ! ಹೌದು…
ಪುರಾಣದ ಪ್ರಕಾರ, ಒಮ್ಮೆ ಅಯ್ಯಪ್ಪ ಸ್ವಾಮಿ ಮತ್ತು ಶನೀಶ್ವರ ದೇವರ ನಡುವೆ ಸಂವಾದ ನಡೆಯಿತು. ಶನಿ ದೇವನು ಮನುಷ್ಯರ ಕರ್ಮಗಳಿಗೆ ಅನುಗುಣವಾಗಿ ತೊಂದರೆಗಳನ್ನು ನೀಡುವುದು ತನ್ನ ಧರ್ಮ ಮತ್ತು ಕರ್ತವ್ಯ ಎಂದು ಹೇಳಿದರು. ಆಗ ಅಯ್ಯಪ್ಪ ಸ್ವಾಮಿ, ತನ್ನ ಭಕ್ತರಿಗೆ ಶನಿದೋಷ ತಟ್ಟಬಾರದೆಂದು ಶನಿಯ ದೃಷ್ಟಿಯಿಂದ ರಕ್ಷಿಸಲು ಬಯಸಿದರು. ಆದ್ದರಿಂದ, ಶನೀಶ್ವರನಿಗೆ ಹೀಗೆ ಹೇಳಿದರು ಮತ್ತು ಒಂದು ವಚನ ಕೇಳಿದರು.
“ನನ್ನ ಭಕ್ತರು 48 ದಿನಗಳ ಕಾಲ ಕಠಿಣ ವ್ರತವನ್ನು ಆಚರಿಸುತ್ತಾರೆ.
- ಅವರು ಈ ವ್ರತದ ಅವಧಿಯಲ್ಲಿ ಸರಳ ಜೀವನ ನಡೆಸುತ್ತಾರೆ (ನೆಲದ ಮೇಲೆ ಮಲಗುವುದು, ಬ್ರಹ್ಮಚರ್ಯ ಪಾಲನೆ, ತಣ್ಣೀರಿನ ಸ್ನಾನ, ಸಾತ್ವಿಕ ಆಹಾರ ಸೇವನೆ).
- ಅವರು ತಮ್ಮ ಐಹಿಕ ಸುಖಗಳನ್ನು ತ್ಯಜಿಸಿ, ನಿನ್ನ ಅಂದರೇ (ಶನಿಯ) ನೆಚ್ಚಿನ ಬಣ್ಣವಾದ ಕಪ್ಪು ಅಥವಾ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ.
- ಬರಿಗಾಲಿನಲ್ಲಿ ಕಾಡು-ಪರ್ವತಗಳನ್ನು ಕ್ರಮಿಸಿ ನನ್ನನ್ನು ನೋಡಲು ಬರುತ್ತಾರೆ.”
ಈ ಕಠಿಣ ವ್ರತಾಚರಣೆಯೇ ನೀನು (ಶನಿ) ಮನುಷ್ಯರಿಗೆ ಕೊಡುವ ಶಿಕ್ಷೆಗಳಿಗೆ ಸಮಾನವಾಗಿರುತ್ತದೆ. ಆದ್ದರಿಂದ, ಈ ರೀತಿ ವ್ರತ ಮಾಡುವ ನನ್ನ ಭಕ್ತರ ಮೇಲೆ ನೀನು ನಿನ್ನ ವಕ್ರ ದೃಷ್ಟಿಯನ್ನು ಬೀರಬಾರದು ಎಂದು ಅಯ್ಯಪ್ಪ ಸ್ವಾಮಿ ಶನಿದೇವರಿಂದ ವಚನ ಪಡೆದರು.
ಶನೀಶ್ವರ ದೇವರು ಕೂಡ ಅಯ್ಯಪ್ಪನ ಈ ಮಾತಿಗೆ ಒಪ್ಪಿದರು. ಅಂದಿನಿಂದ, ಅಯ್ಯಪ್ಪನ ಭಕ್ತರು ಕಪ್ಪು ವಸ್ತ್ರ ಧರಿಸುವುದರಿಂದ, ಶನಿದೋಷದಿಂದ ಮುಕ್ತಿ ಪಡೆಯುತ್ತಾರೆ ಎಂಬುದು ಭಕ್ತರ ದೃಢ ನಂಬಿಕೆ. ಕಪ್ಪು ವಸ್ತ್ರ ಕೇವಲ ಬಟ್ಟೆಯಲ್ಲ, ಅದು ಭಕ್ತಿ, ಶಿಸ್ತು ಮತ್ತು ಶನಿ ದೋಷದಿಂದ ರಕ್ಷಣೆ ನೀಡುವ ಅಯ್ಯಪ್ಪನ ವರ! ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದರೆ, ದಯವಿಟ್ಟು ಲೈಕ್ ಮಾಡಿ, ಮತ್ತು ಇಂತಹ ಇನ್ನಷ್ಟು ಧಾರ್ಮಿಕ ಕಥೆಗಳಿಗಾಗಿ ನಮ್ಮ ಚಾನೆಲ್ಗೆ ಸಬ್ಸ್ಕ್ರೈಬ್ ಮಾಡಿ.
ಸ್ವಾಮಿ ಶರಣಂ ಅಯ್ಯಪ್ಪ
